ಸುಪ್ರಭಾತ ಎಂದಾಕ್ಷಣ ಪ್ರತಿಯೊಬ್ಬ ಶ್ರೀ ಸಾಮಾನ್ಯ ತಿಳಿದುಕೊಳ್ಳುವುದು ಯಾವುದೋ ದೇವರ ಮೇಲೆ ಯಾರೋ ಸುಪ್ರಭಾತ ಹಾಡಿರಬೇಕು ಎಂದು ಕೊಳ್ಳುತ್ತಾರೆ.
ಆದರೆ ವಿಷಯ ಅದಲ್ಲ, ಕನ್ನಡದ ಮೇರುನಟ ಹಾಗೂ ವಿಶ್ವದ ಯಾವುದೇ ಒಬ್ಬ ನಟನಿಗೆ ಸರಿಸಾಟಟಿಯಾಗಿ ನಿಲ್ಲಬಲ್ಲ ನಟರೆಂದರೆ ಅದು ಡಾ|| ರಾಜ್ಕುಮಾರ್.
ಕರ್ನಾಟಕದ ಪ್ರತಿಯೊಬ್ಬರ ಹೃದಯದಲ್ಲೂ ನೆಲೆನಿಂತಿರುವ ಡಾ|| ರಾಜ್ರನ್ನು ಜನ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದಕ್ಕೆ ಉದಾಹರಣೆ ಇತ್ತೀಚೆಗೆ ವರ್ಣದಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ದ ಅಭೂತಪೂರ್ವ ಯಶಸ್ಸು.
ಡಾ|| ರಾಜ್ ನಮ್ಮನಗಲಿ ೯ ವರ್ಷ ಕಳೆದರೂ ಅವರ ನೆನೆಪು ಹಚ್ಚ ಹಸಿರು. ಇದೇ ಏಪ್ರಿಲ್ ೧೨ರಂದು ೯ನೇ ವರ್ಷದ ಪುಣ್ಯತಿಥಿಯಂದು ಡಾ|| ರಾಜ್ರ ಮೇಲೆ ಸುಪ್ರಭಾತವೊಂದು ಸಿ.ಡಿ. ಮೂಲಕ ಬಿಡುಗಡೆಯಾಗಲಿದೆ.
ಭಾರತೀಯ ಚಿತ್ರರಂಗದ ಯಾವೊಬ್ಬ ನಟ/ನಟಿಗೆ ಇದುವರೆವಿಗೂ ಯಾರೊಬ್ಬರು ಸುಪ್ರಭಾತವನ್ನು ಬಿಡುಗಡೆ ಮಾಡಿಲ್ಲ. ಈ ಗೌರವ ಡಾ|| ರಾಜ್ಗೆ ಲಭಿಸಲಿದೆ. ಈ ಸುಪ್ರಭಾತ ಆಡಿಯೋವನ್ನು ಪ್ರಜಾಪ್ರಭುತ್ವ, ಗಂಗವ್ವ ಗಂಗಾಮಾಯಿ, ಸಿಡಿದೆದ್ದ ಗಂಡು ಚಿತ್ರಗಳಿಗೆ ಸಹ ನಿರ್ಮಾಪಕರಾಗಿದ್ದ ಮು. ರಮೇಶ್ ಸಿದ್ದಪಡಿಸಿದ್ದಾರೆ.
೨೭ ನಿಮಿಷದ ಈ ಸುಪ್ರಭಾತವು ೧೮ ನುಡಿಗಳನ್ನು ಹೊಂದಿದ್ದು, ೧೮ ವಿವಿಧ ರಾಗಗಳಲ್ಲಿ ಮೂಡಿ ಬರಲಿದೆ. ಅಜಯ್ ವಾರಿಯರ್ ಇದನ್ನು ಹಾಡಿದ್ದು, ಎಲ್.ಎನ್. ಗೂಚಿ ಸಂಗೀತ ನೀಡಿದ್ದಾರೆ. ಚಿತ್ರದುರ್ಗದ ಕನ್ನಡ ಪ್ರಾಧ್ಯಾಪಕ ಕೃಷ್ಣಮೂರ್ತಿ ಸುಪ್ರಭಾತವನ್ನು ರಚಿಸಿದ್ದು, ಲಹರಿ ಸಂಸ್ಥೆ ಏಪ್ರಿಲ್ ೧೨ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.